Tuesday, January 31, 2017

ಮದುವೆ ಪ್ರಸಂಗ

ಅಜ್ಜಿ ನಮ್ಮ ಮನೆಗೆ ಬಂದಿದ್ದಾಗ ಒಂದು ಮಧ್ಯಾಹ್ನ, ನನಗೆ  ಹೊತ್ತು ಕಳೆಯುವುದು ಹೇಗೆಂದು ತೋಚದೆ ಅವರ ಬಳಿ ಹೋಗಿ, ಅವರ ಮದುವೆಯ ಸಂದರ್ಭದ ಕತೆಗಳನ್ನು ಹೇಳುವಂತೆ ಕೇಳಿದೆ. ಆಗ ಅವರು ತಮ್ಮ ನೆನಪನ್ನು ಕೆದಕುತ್ತಾ ಈ ಕತೆಯನ್ನು ನನಗೆ ಹೇಳಿದರು.

"ಇದೆಲ್ಲ ಸುಮಾರು ಅರವತ್ತೈದು ವರ್ಷದ ಹಿಂದಿನ ಕತೆ. ಆಗಿನ್ನೂ ನನಗೆ ಮದುವೆ ಗೊತ್ತಾಗಿರಲಿಲ್ಲ. ನನ್ನ ವಯಸ್ಸಿನ ನನ್ನಿಬ್ಬರು ಗೆಳತಿಯರಿಗೂ ಕೂಡ. ಲಕ್ಷ್ಮಿ ಅಂತ ಒಬ್ಬಳ ಹೆಸರು. ಇನ್ನೊಬ್ಬಳು ವಿಮಲಾ ಅಂತ. ಆ ಲಕ್ಷ್ಮಿಗೆ ಒಬ್ಬ ಅಣ್ಣ ಇದ್ದ - ಚಂದ್ರು ಅಂತ. 

"ವಿಮಲಾಳ ತಂದೆಗೆ ಅವಳನ್ನ ಚಂದ್ರುವಿಗೆ ಕೊಟ್ಟು ಮದುವೆ ಮಾಡಬೇಕು ಅಂತ ಅನ್ನಿಸಿ, ಅದೇ ಮಾತನ್ನ ಲಕ್ಷ್ಮಿಯ ತಂದೆಯೊಂದಿಗೆ ಪ್ರಸ್ತಾಪ ಮಾಡಿದ್ರು. ವಿಮಲಾ ಬಹಳ ಒಳ್ಳೆ ಹುಡುಗಿ. ಅಲ್ಲದೆ, ಅವಳು ಲಕ್ಷ್ಮಿ ಬಹಳ ಒಳ್ಳೆ ಸ್ನೇಹಿತೆಯರಾಗಿದ್ರಿಂದ, ನಾಳೆ ಮದುವೆ  ಆಗಿ ಬಂದಮೇಲೂ ಅತ್ತಿಗೆ - ನಾದಿನೀರು  ಜಗಳವಾಡಿ ಮನೆ ಒಡೆಯೋ ಪ್ರಸಂಗ ಬರಲ್ಲ ಅಂತ ಅವರಿಗೂ ಅನ್ನಿಸರಬೇಕು. ಅವರೂ ಒಪ್ಪಿಕೊಂಡ್ರು. ಲಕ್ಷ್ಮೀಗಂತೂ ವಿಮಲಾ ತನ್ನ ಅತ್ತಿಗೆಯಾಗಿ ಬರ್ತಾಳೆ ಅಂತ ಬಹಳ ಖುಷಿಯಾಯ್ತು. ನನಗೂ ಅಷ್ಟೇ. ನಮ್ಮ ಮನೇಲೆ ಮದುವೆ ನಡಿಯೋ ಅಷ್ಟು ಸಂತೋಷ!

"ಹೀಗಿರುವಾಗ, ಒಂದು ದಿನ ನಾವು ಮೂವರು ಲಕ್ಷ್ಮಿಯ ಮನೇಲಿ ಕೂತು ಹರಟುತ್ತಿದ್ವಿ. ಲಕ್ಷ್ಮಿಯ ತಂದೇನೂ ವಿಮಲಾಳ ತಂದೇನೂ ಹೊರಗಡೆ ಕೂತು ಕೊಟ್ಟು - ಕೊಳ್ಳುವ ವಿಚಾರವಾಗಿ ಏನೋ ಮಾತಾಡ್ತಿದ್ರು. ಇದ್ದಕ್ಕಿದ್ದ ಹಾಗೆ, ವಿಮಲಾ ಹೊರಗೆ ಹೋಗಿ 'ಅಪ್ಪ, ನಂಗೆ ಈ ಮದುವೆ ಬೇಡ' ಅಂದ್ಲು. ನಮ್ಗೆಲ್ಲಾ ಬಹಳ ಆಶ್ಚರ್ಯ ಆಯ್ತು. ಚಂದ್ರು ಅಂತ ಹುಡ್ಗ ಸಿಗೊಕ್ಕೆ ಪುಣ್ಯ ಮಾಡಿರ್ಬೇಕು ಅಂತ ಹಲವಾರು ಬಾರಿ ನಾವುಗಳು ಮಾತಾಡಿಕೊಂಡಿದ್ದುಂಟು. ಈಗ ನೋಡಿದ್ರೆ ಅವಳು ಹೀಗೆ ಹೇಳ್ತಿದ್ದಾಳೆ! ಅವಳ ತಂದೆ ಬಹಳ ನಯವಾಗಿ 'ಯಾಕಮ್ಮ?' ಅಂತ ಕೇಳಿದ್ರು. 'ನಾನು ಈ ಮದುವೆಗೆ ಒಪ್ಪಿದ್ದೇ ಲಕ್ಷ್ಮಿಯ ಜೊತೇಲಿ ಇರಬಹುದು ಅಂತ. ನನಗೆ ಲಕ್ಷ್ಮಿ ಜೊತೇಲೆ ಮದುವೆ ಮಾಡಿ' ಅಂತ ಹೇಳಿ, ಯಾರ ಜೊತೆಗೂ ಇನ್ನೊಂದು ಮಾತಾಡದೆ ಹೊರನಡೆದುಬಿಟ್ಟಳು. 

"ವಿಮಲಾಳ ತಂದೆ 'ಇದ್ಯಾವ ಗಾಳಿ ಮೆಟ್ಟಿಕೊಳ್ತು?' ಎನ್ನುತ್ತಾ ಒಂದಷ್ಟು ನಿಮಿಷ ದಿಕ್ಕೇ ತೋಚದೆ ಕೂತುಬಿಟ್ರು. ನಮಗೂ ಏನು ನಡೀತಿದೇ ಅಂತ ಅರ್ಥ ಆಗ್ಲಿಲ್ಲ. ಲಕ್ಷ್ಮಿಯ ತಂದೆ 'ಹುಚ್ಚು ಹುಡುಗಿ! ಪಾಪ ಮದುವೆಯ ಬಗ್ಗೆ ಹೆದರಿರಬೇಕು. ಮನೆಗೆ ಹೋಗಿ ಸ್ವಲ್ಪ ಸಮಾಧಾನವಾಗಿ ಕೂತು ಮಾತಾಡಿ' ಎಂದು ಅವರಿಗೆ ಧೈರ್ಯ ಹೇಳಿದರು. 

"ಇದಾದ ಒಂದೆರಡು ವಾರಗಳು ಮದುವೆಯ ಬಗ್ಗೆ ಯಾರೂ ಏನೂ ಮಾತಾಡಲಿಲ್ಲ. ಆನಂತರ ಮತ್ತೆ ವಿಮಲಾಳನ್ನು ಕೇಳಿದಾಗ, ಅವಳು ಅದೇ ಉತ್ತರ ಕೊಟ್ಟಳಂತೆ. ಅವಳ ತಂದೆಗೆ ಜಂಘಾಬಲವೇ ಇಲ್ಲದ ಹಾಗಾಯ್ತು. ಏನೂ ತೋಚದೆ ನಮ್ಮಪ್ಪನ ಹತ್ತಿರವೂ, ಲಕ್ಷ್ಮಿಯ ತಂದೆ ಹತ್ತಿರವೂ ಹೇಳಿಕೊಂಡ್ರು. ಯಾರಾದ್ರೂ ಮಾಟ ಮಾಡ್ಸಿರ್ಬೇಕು ಅನ್ನಿಸಿ, ನಮ್ಮೂರಿನ ಬಳಿಯಿದ್ದ ಒಬ್ಬ ಮಂತ್ರವಾದಿ ಹತ್ರ ಹೋದ್ರಂತೆ. ಅವ್ನು ಪ್ರಶ್ನೆ ಹಾಕಿ ನೋಡಿ, ಇದೆಲ್ಲ ಆ ರಮೇಶನ ಆತ್ಮದ್ದೇ ಕಿತಾಪತಿ ಅಂದನಂತೆ. 

"ಆಗ ಒಂದೆರಡು ವರ್ಷದ ಮುಂಚೆ, ನಮ್ಮ ಬೀದಿಲೀ ರಮೇಶ ಅಂತ ಒಬ್ಬ ಹುಡುಗ ಇದ್ದ. ಲಕ್ಶ್ಮೀನಾ ಮದ್ವೆ ಮಾಡ್ಕೋ ಅಂತ ಬಹಳ ಪೀಡಿಸ್ತಿದ್ದ. ನೋಡೋವರಿಗು ಲಕ್ಷ್ಮಿ ನೋಡಿ ಅವಳ ಅಪ್ಪಂಗೆ ಹೇಳಿದ್ಲು. ಅವ್ರು ಊರಿನೋರ ಮುಂದೆ ಅವ್ನಿಗೆ ಬೈದು, ಕಪಾಳಕ್ಕೆ ಹೊಡೆದು ಔಮಾನ ಮಾಡಿದ್ರು. ಅದಾದ ಸ್ವಲ್ಪ ದಿನಕ್ಕೆ ಅವ್ನು ವಿಷ ತೊಗೊಂಡು ಸತ್ತೋದ. ಈಗ ಅವನು ವಿಮಲಾಳ ಒಳಗೆ ಸೇರ್ಕೊಂಡು ಹೀಗೆಲ್ಲ ಮಾಡ್ತಿದಾನೆ ಅಂತ ಆ ಮಂತ್ರವಾದಿ ಹೇಳ್ದ. 

"ಮದ್ವೆ ದಿನ ತೀರಾ ಹತ್ರ ಆಗೋದ್ರೊಳ್ಗೆ ಇದನೆಲ್ಲ ಕಳ್ಕೋಬೇಕು ಅಂತ ವಿಮಲಾಳ ತಂದೆ ಆ ಮಂತ್ರವಾದೀನಾ ಮನೆಗೇ ಕರಿಸಿದ್ರು. ನಾನು ನೋಡಕ್ಕೆ ಹೋಗ್ಲಿಲ್ಲ. ಆದ್ರೆ, ಪಕ್ಕದ ಮನೇಲಿ ನಿಂತು ಎಲ್ಲ ಕೇಳ್ತಾಯಿದ್ದೆ. ಅವ್ನು ಭೂತ ಬಿಡಿಸಿದನೋ ಏನೋ ಗೊತ್ತಿಲ್ಲ. ವಿಮಲಾ ನೋವಿನಿಂದ ನರಳಿದ್ದು, ಜೋರಾಗಿ ಚೀರಿದ್ದು ಮಾತ್ರ ಗೊತ್ತು ನಂಗೆ. ಮಂತ್ರವಾದಿ ಹೋದ ಮೇಲೆ ಹೋಗಿ ನೋಡಿದ್ರೆ, ಅವಳು ಅತ್ತೂ ಅತ್ತೂ, ಸುಸ್ತಾಗಿ ಮಲಗಿದ್ದಳು. ಅವಳ ಮೈಮೇಲೆಲ್ಲಾ ಬರೆಗಳು. ಅದ್ಯಾವ ಕಡ್ಡೀಲಿ ಹೊಡೆದಿದ್ನೋ ಹಾಳಾದವ್ನು! 

"ಬರೆಯ ಗಾಯಗಳು ಮರೆಯಾಗೋ ವೇಳೆಗೆ ಮದುವೆಯ ದಿನ ಬಂದೇಬಿಡ್ತು. ವಿಮಲಾಳ ತಂದೆಗಿದ್ದ ಒಂದೇ ಒಂದು ಆತಂಕ ಅಂದ್ರೆ ಮದುವೆಯ ದಿನ ಯಾರಾದ್ರೂ ಬಂದು ಅವರ ಮಗಳಿಗೆ ಮೆಟ್ಕೊಂಡಿದ್ದ ಗಾಳೀ ಬಗ್ಗೆ ಕೇಳಬಹುದು ಅಂತ. ಪುಣ್ಯಕ್ಕೆ, ಹಾಗೇನು ಆಗ್ಲಿಲ್ಲ. ಎಲ್ಲ ಸುಸೂತ್ರವಾಗಿ ಮುಗೀತು. 

"ಮದುವೆಯಾಗಿ ಮೂರು ತಿಂಗಳಾಗಿರಬೇಕು. ಒಂದು ದಿನ, ಮನೇಲಿ ಯಾರು ಇಲ್ಲದ ಸಮಯ ನೋಡಿ, ವಿಮಲಾ ವಿಷ ತೊಗೊಂಡು ಪ್ರಾಣ ಕಳ್ಕೊಂಡ್ಳು. ರಮೇಶ ಆ ಮನೆ ಮೇಲೆ ಸೇಡು ತೀರಿಸ್ಕೊಂಡ ಅಂತ ಊರಲ್ಲಿ ಎಲ್ರೂ ಮಾತಾಡ್ಕೊಂಡ್ರು. ಆಮೇಲೆ, ಲಕ್ಷ್ಮಿ ಮದುವೆಯಾಗಿ ಬೇರೆ ಮನೆಗೆ, ಬೇರೆ ಊರಿಗೆ ಹೋದ್ಲು. ನಾನು ನಿಮ್ಮ ತಾತನ್ನ ಮನೆಗೆ ಬಂದೆ. ಈಗ ಅವ್ಳು ಎಲ್ಲಿದ್ದಾಳೋ? ಅಥವಾ ಇಲ್ಲವೇ ಇಲ್ವೋ" ಎಂದು ಹೇಳುತ್ತಾ ಅಜ್ಜಿ ಹೊರಗಡೆ ಓಡಾಡುತ್ತಿದ್ದ ಗಾಡಿಗಳ ಕಡೆ ಮುಖ ಮಾಡಿದರು. .

ಅಜ್ಜಿಯನ್ನು ಅವರ ನೆನಪುಗಳ, ಭಾವನೆಗಳ ಜೊತೆ ಇರಲು ಬಿಟ್ಟು ಒಳನಡೆಯಲು ಏಳಬೇಕೆಂದಿದ್ದಾಗ ಅಜ್ಜಿಯೇ ಮಾತಿಗಿಳಿದರು. "ನಂಗೇನನ್ಸತ್ತೆ ಗೊತ್ತಾ? ವಿಮಲಂಗೆ ಯಾವ ಭೂತಾನೂ ಮೆಟ್ಟ್ಕೊಂಡಿರಲಿಲ್ಲ. ಅವ್ಳಿಗೆ ಹುಡ್ಗನ್ನ ಬದ್ಲು ಒಬ್ಬ ಹುಡ್ಗಿ ಮೇಲೆ ಪ್ರೀತಿ ಇತ್ತು. ತಪ್ಪೇನು? ಅಬ್ಬಬ್ಬಾ ಅಂದ್ರೆ ಮದ್ವೆ ಆಗ್ತಿರ್ಲಿಲ್ಲ, ಅಷ್ಟೇ ತಾನೇ? ಆ ಮಂತ್ರವಾದಿನಾ ಕರ್ಸಿ ಮದ್ವೆ ಏನೋ ಮಾಡ್ಸಿದ್ರು. ಆದ್ರೇ, ಅವ್ನನ್ನ ಕರೆಸ್ದೆ ಇದ್ದಿದ್ರೆ, ವಿಮಲಾ ಇನ್ನಷ್ಟು ದಿನ ಜೀವಂತವಾಗಿ ಇರ್ತಿದ್ಲೋ ಏನೋ" ಎಂದು ಹೇಳುವಾಗ ಅಜ್ಜಿಯ ಧ್ವನಿ ಭಾರವಾಗಿತ್ತು. "ಈ ಮಾತನ್ನ ನಾನೇನಾದ್ರೂ ಆಗ ಹೇಳಿದ್ದಿದ್ರೆ, ಅವಳ ಜೊತೆ ನಂಗೂ ಆ ಮಂತ್ರವಾದಿ ಬರೇ ಬೀಳೋವರ್ಗು ಹೊಡೀತಿದ್ನೇನೋ" ಎಂದು ಹೇಳಿ, ವ್ಯಂಗ್ಯವಾಗಿ ನಗುತ್ತಾ ಅಜ್ಜಿ ಒಳನಡೆದರು. 



Wednesday, January 18, 2017

ಶ್ರಾದ್ಧದ ಸುತ್ತಾಮುತ್ತಾ...

ಮಸುಕು ಮಸುಕಾದ ಬಾಲ್ಯದ ನೆನಪುಗಳಲ್ಲಿ ನಮ್ಮ ತಾತ ತೀರಿಹೋಗಿದ್ದು ಸಹ ಒಂದು. ಆಗ ನನಗೆ ಮೂರೂ ತುಂಬಿರಲಿಲ್ಲ. ನಮ್ಮತ್ತೆಯ ಮನೆಯ ವೆರಾಂಡಾದಲ್ಲಿ ಬಿಳಿಯ ಬಟ್ಟೆಯಲ್ಲಿ ಮಲಗಿದ್ದ ತಾತ ಏಳುತಿಲ್ಲವಲ್ಲಾ ಎಂದು ಕೇಳಿದ್ದು ಅಸ್ಪಷ್ಟವಾಗಿ ಜ್ಞಾಪಕವಿದೆ (ಅಥವಾ ಹಾಗೆ ನಾನು ಚಿತ್ರಿಸಿಕೊಂಡಿದ್ದೇನೆಯೋ? ಗೊತ್ತಿಲ್ಲ!). ಸಾವಿನ ಬಗ್ಗೆ ಅರಿವಿಲ್ಲದ ಆ ವಯಸ್ಸಿನಲ್ಲಿ, ಇನ್ನು ಮುಂದೆ ತಾತ ಮನೆಯಲ್ಲಿ ನಮ್ಮ ಜೊತೆ ಇರುವುದಿಲ್ಲ ಎಂಬುದೊಂದು ಬಿಟ್ಟರೆ ಬೇರೇನೂ ತಿಳಿಯಲಿಲ್ಲ. (ಸಾವಿನ ಬಗ್ಗೆ ಈಗ 'ಅರಿವಿ'ದೆ ಎಂದು ನಾನು ಹೇಳುತ್ತಿಲ್ಲ. ಹಾಗೆ ಭಾವಿಸಲೂಬಾರದು.) 

ತದನಂತರ, ಪ್ರತೀ ವರ್ಷ ನಾನು ನಮ್ಮ ತಾತನ ತಿಥಿಗಾಗಿ ಕಾಯುತ್ತಿದ್ದೆ. ಏಕೆಂದರೆ, ತಿಥಿಮನೆಯ ಹುಳಿಗೆ ಇರುವ ರುಚಿ ಬೇರೆಯ ಹುಳಿಗಳಿಗೆ  ಖಂಡಿತ ಇರುವುದಿಲ್ಲ. ಅದೂ ಅಲ್ಲದೆ, ವಡೆ-ಪಾಯಸ, ಆಂಬೊಡೆಗಳ ಜೊತೆಗೆ ಸಜ್ಜಪ್ಪವೋ ರವೆಯುಂಡೆಯೋ ಇರುತ್ತಿತ್ತು. ಅಡುಗೆಯವರಿಗೆ ಸ್ವಲ್ಪ ಹೆಚ್ಚು ದುಡ್ಡು ಕೊಟ್ಟರೆ, ಎರಡು-ಮೂರು ದಿನಗಳಿಗಾಗುವಷ್ಟು ಭಕ್ಷ್ಯಗಳನ್ನು ಪಾರ್ಸೆಲ್ ಕೊಡುತ್ತಿದ್ದರು! ಏನೇ ಆಗಲಿ, "ಬ್ರಾಹ್ಮಣಂ ಭೋಜನಪ್ರಿಯಂ" ಅಲ್ಲವೇ?!

ಇದರ ಜೊತೆಗೆ ಇನ್ನೊಂದು ಕಾರಣವೂ ಇತ್ತು. ಬೇರೆ ಬೇರೆ ಊರುಗಳಲ್ಲಿದ್ದ  ನಮ್ಮ ಇಬ್ಬರು ದೊಡ್ಡಪ್ಪಂದಿರು ಬೆಂಗಳೂರಿಗೆ ವರ್ಷಕ್ಕೊಮ್ಮೆ ಬರುತ್ತಿದ್ದರು - ನಮ್ಮ ತಾತನ ತಿಥಿಗೆ. ಹೀಗಾಗಿ ನಮ್ಮ ತಾತನ ತಿಥಿ ಎನ್ನುವುದಕ್ಕಿಂತ ಕುಟುಂಬದ 'ಗೆಟ್-ಟುಗೆತರ್' ಎಂದೇ ನಾನು ಭಾವಿಸಿದ್ದೆ. (ಈಗ ಎಲ್ಲರೂ ಒಂದೇ ಊರಿನಲ್ಲಿ ಇರುವುದರಿಂದ ಹಬ್ಬದ ಸಂದರ್ಭಗಳಲ್ಲಿಯೂ  ಗೆಟ್-ಟುಗೆತರ್ ನಡೆಯುತ್ತದೆ.) ನಮ್ಮ ದೊಡ್ಡಪ್ಪ ಪ್ರತೀ ಬಾರಿ  ಊರಿಗೆ ಹೋಗುವ ಮುನ್ನ, ಮನೆಯ ಬಳಿಯಿದ್ದ ವಿ.ಬಿ. ಬೇಕರಿಗೋ ಬಟರ್ ಸ್ಪಾಂಜಿಗೋ ಹೋಗಿ ಬಿಸ್ಕತ್ತು, ಖಾರ ಸೇವೆ ಮೊದಲಾದ ತಿಂಡಿಗಳನ್ನು ಕೊಳ್ಳುತ್ತಿದ್ದರು. ಆ ಸಂದರ್ಭಗಳಲ್ಲಿ ಎಲ್ಲರಿಗಿಂತ ಚಿಕ್ಕವನಾದ ನನ್ನನ್ನೂ ಕರೆದುಕೊಂಡು ಹೋಗಿ ಏನಾದರೂ ಕೊಡಿಸುತ್ತಿದ್ದರು. ಮನೆಯಲ್ಲಿ ಎಷ್ಟೇ ತಿಂದರು, ಇನ್ನೊಬ್ಬರು ಕೊಡಸಿದ ತಿಂಡಿಯೇ ಹೆಚ್ಚು ರುಚಿಯಲ್ಲವೇ? ಈ ಎಲ್ಲದರ ಪರಿಣಾಮವಾಗಿ ನನಗೆ ನಮ್ಮ ತಾತನ ತಿಥಿ ಬಹಳ ಮುಖ್ಯವಾಗಿತ್ತು. 

ತಾತ ತೀರಿಹೋದ ಐದು ವರ್ಷಗಳ ನಂತರ, ನಮ್ಮ ದೊಡ್ಡಪ್ಪಂದಿರು ವರ್ಷಕ್ಕೆ ಎರಡೆರಡು ಬಾರಿ ಬರಲು ಶುರು ಮಾಡಿದರು - ನಮ್ಮ ಅಜ್ಜಿಯ ತಿಥಿಗೋಸ್ಕರ. ಮನೆಯಲ್ಲಿ ಯಾರಾದರೂ ಸತ್ತಾಗ 'ಗರುಡ ಪುರಾಣ'ವನ್ನು ಓದುವುದು ವಾಡಿಕೆ. ನಮ್ಮಪ್ಪ ಸಹ ಓದುತ್ತಿದ್ದರು. ಸಾಮಾನ್ಯವಾಗಿ ಇಂತಹ ಪುಸ್ತಕಗಳನ್ನು ಮಕ್ಕಳ ಕೈಗೆ ಸಿಗದ ಹಾಗೆ ಇಡುತ್ತಾರೆ. ನಾನು ಈ ಪುಸ್ತಕ ಇರುವ ಸ್ಥಳ ನೋಡಿಕೊಂಡು ಕದ್ದು ಓದಿ, ಬೈಸಿಕೊಂಡೆ. ಇದಕ್ಕೆ ಪ್ರಚೋದಿಸಿದ್ದು ಮಾತ್ರ ನಮ್ಮ ಎರಡನೇ ದೊಡ್ಡಪ್ಪ. ವೈಕುಂಠ ಸಮಾರಾಧನೆಯವರೆಗೂ ನಮ್ಮ ಮನೆಯಲ್ಲೇ ಇದ್ದ ಅವರು,  ರಕ್ತ, ಕೀವುಗಳು ತುಂಬಿದ್ದ ವೈತರಣೀ ನದಿಯನ್ನೂ ಪರಲೋಕದ ದಾರಿಯಲ್ಲಿ ಅನುಭವಿಸಬೇಕಾದ ಕಾರ್ಪಣ್ಯಗಳನ್ನೂ ಅತಿ ರೋಚಕವಾಗಿಯೂ ಭಯಂಕರವಾಗಿಯೂ ವರ್ಣಿಸಿದ್ದರು. ಕೆಟ್ಟ ಕುತೂಹಲವನ್ನು ತಡೆಯಲಾರದೆ, ನಾನು ಅದನ್ನು ಪುಸ್ತಕದಲ್ಲೇ ಓದಲು ಪ್ರಯತ್ನಿಸ ಹೋಗಿ ಸಿಕ್ಕಿಬಿದ್ದೆ. ಅದ್ಯಾಕೋ, ಈವರೆಗೂ ಆ ಆಸೆ ಫಲಕಾರಿಯೇ ಆಗಿಲ್ಲ. 

ಸ್ವಲ್ಪ ತಿಳಿವಳಿಕೆ ಬಂದ ಮೇಲೆ, ತಿಥಿ ಮಾಡುವುದು ನಿರರ್ಥಕ ಎಂದು ಅನಿಸತೊಡಗಿತು. ಈ ವಿಚಾರವಾಗಿ ಮನೆಯಲ್ಲಿ ಹಲವಾರು ಬಾರಿ ಚರ್ಚೆಗಳೂ ನಡೆದಿವೆ. 
ಪ್ರತೀ ಬಾರಿಯೂ ಅದದೇ ಬ್ರಾಹ್ಮಣರನ್ನು ಕರೆದು ತಿನ್ನಿಸುವ ಬದಲು ನಿಜಕ್ಕೂ ಅಗತ್ಯವಿದ್ದವರಿಗೆ ಅನ್ನದಾನ ಮಾಡುವುದು ಒಳ್ಳೆಯದಲ್ಲವೇ? ಆ ಬ್ರಾಹ್ಮಣರೋ! ಊಟದ ಜೊತೆಗೆ ಪಂಚೆ ಶಲ್ಯಗಳನ್ನು ಕೊಟ್ಟರೆ, ದಕ್ಷಿಣೆಯಾಗಿ ಕೊಟ್ಟ ಹಣದಲ್ಲಿ ಚೌಕಾಶಿ ಮಾಡುತ್ತಾರೆ. 

ತಿಥಿ ಮಾಡುವಾಗ ಕರ್ತೃಗಳು ಉಪವಾಸವಿರಬೇಕು. ಆದರೆ ನಮ್ಮ ದೊಡ್ಡಪ್ಪ ಒಬ್ಬರು ಬರೀ ಅವಲಕ್ಕಿಯನ್ನೋ ಮೊಸರವಲಕ್ಕಿಯನ್ನೋ ತಿನ್ನುತ್ತಾರೆ. ಅವಕ್ಕೆ ದೋಷವಿಲ್ಲವಂತೆ. ಈ ಶಾಸ್ತ್ರಗಳನ್ನು ರಚಿಸಿದವರು ಇಂತಹ "ಟೆಕ್ನಿಕಲ್ ಲೂಪ್ಹೋಲ್"ಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ರಚಿಸಿದರೋ ಏನೋ ಎಂದು ಅನುಮಾನವಾಗುತ್ತದೆ! 

ನಮ್ಮ ತಾತನ ತಿಥಿ  ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಇರುತ್ತದೆ. ಅದೇ ಸಮಯಕ್ಕೆ ಸಾಮಾನ್ಯವಾಗಿ ಭಾರತದ ಯಾವುದಾದರೂ ಕ್ರಿಕೆಟ್ ಸರಣಿ ನಡೆಯುತ್ತಿರುತ್ತದೆ. ಇಂಥ ಸಂದರ್ಭದಲ್ಲಿ, ತಿಥಿ ಮಾಡಿಸುವ ಜೋಯಿಸರು, ಬ್ರಾಹ್ಮಣಾರ್ಥಕ್ಕೆ ಬಂದವರಾದಿಯಾಗಿ ಎಲ್ಲರೂ ಬಂದು ಸ್ಕೋರ್ ಕೇಳಿ ಹೋಗುತ್ತಾರೆ. 

ವಯಸ್ಸಿನ ಜೊತೆಗೆ ಹಸಿವು ತಡೆಯುವ ಶಕ್ತಿಯೂ ಕಡಿಮೆಯಾಗುತ್ತದೆ ಅನಿಸುತ್ತದೆ. ಏಕೆಂದರೆ, ಪ್ರತೀ ಬಾರಿಯೂ ಯಾವುದೋ ಒಂದು ಕಾರಣಕ್ಕೆ ನಮ್ಮಪ್ಪ ದೊಡ್ಡಪ್ಪಂದಿರಿಂದ ಗೊಣಗಾಟ - ಕಿರುಚಾಟಗಳು ನಡೆದೇ ನಡೆಯುತ್ತವೆ. 

ಇಷ್ಟಾದರೂ ಪ್ರತಿ ವರ್ಷ ತಿಥಿ ಮಾಡಿಯೇ ಮಾಡುತ್ತಾರೆ. ಇಲ್ಲದಿದ್ದರೆ ತಾತ - ಅಜ್ಜಿಯರ ಆತ್ಮಕ್ಕೆ ಶಾಂತಿ ಇರುವುದಿಲ್ಲ ಎಂದು ಇವರುಗಳ ನಂಬಿಕೆ. 

ಮನೆಯಿಂದ ಹೊರಗಿರುವ ನನಗೆ ತಾತನ ತಿಥಿ ತಪ್ಪುತ್ತದೆ. ಆ ದಿನದಂದು ಮನೆಯಲ್ಲಿ ಊಟಕ್ಕೆ ಕುಳಿತ ನಂತರವೇ ನಾನು ಊಟ ಮಾಡಿದ ಸಂದರ್ಭವೂ ಇದೆ. ಆನಂತರ "ಅದೇಕೆ ಹಾಗೆ ಮಾಡಿದೆ?" ಎಂದು ನನ್ನನ್ನು ನಾನೇ ಕೇಳಿಕೊಂಡದ್ದೂ ಇದೆ.

ಮನೆಗೆ ಹೋದಾಗಲೆಲ್ಲ ನಾನು ಅಜ್ಜಿಯ ತಿಥಿಗೆ ಕಾಯುತ್ತೇನೆ - ವಡೆ-ಪಾಯಸದ ಆಸೆಯಲ್ಲಿ!  




Saturday, January 7, 2017

ನಿರ್ಣಯ

ಕಳೆದ ಸಲ ಊರಿಗೆ ಹೋಗಿದ್ದಾಗಿನ ಮಾತು. ಊಟದ ನಂತರ ನಮ್ಮ ಮಾವನೊಡನೆ ಜಗುಲಿಯ ಮೇಲೆ ಕುಳಿತು ಹರಟುತ್ತಿದ್ದೆ. ನಮ್ಮನ್ನು ನೋಡಿದ ವೆಂಕಟೇಶಬಾಬು ಬಂದು ಸ್ವಲ್ಪ ದೂರದಿಂದಲೇ "ನಮಸ್ಕಾರ ಬುದ್ದಿ" ಎನ್ನುತ್ತಾ ನಿಂತ. ಅಷ್ಟು ದೂರದಿಂದಲೇ ಅವನು ಕುಡಿದಿದ್ದ ಎಂದು ಗೊತ್ತಾಗುತ್ತಿತ್ತು. ವೆಂಕಟೇಶಬಾಬು ನಮಗೇನು ಹೊಸಬನಲ್ಲ. ನನಗೆ ನೆನಪಿದ್ದಾಗಿನಿಂದಲೂ ಅವನು ನಮ್ಮ ಮಾವನ ಮನೆಯ ಕೆಲಸಗಳಲ್ಲಿ ನೆರವಾಗುತ್ತಿದ್ದ. ನನ್ನ ಸೋದರ ಸಂಬಂಧಿಗಳೆಲ್ಲ, ಅವನ ವಯಸ್ಸನ್ನು ಲೆಕ್ಕಿಸದೆ, ಅವನನ್ನು "ಹೋಗೋ", "ಬಾರೋ" ಎಂದೇ ಮಾತಾಡಿಸುತ್ತಿದ್ದರು.  ಅವನೂ ಎಂದು ಎದುರಾಡಿರಲಿಲ್ಲ. ಆದರೂ, ನಾನು "ಬನ್ನಿ", "ಹೋಗಿ" ಎಂದೇ ಕೂಗುತ್ತಿದ್ದೆ. ಕುಡಿದ ಅಮಲಿನಲ್ಲಿ ಇಂಗ್ಲಿಷ್ ಮಾತಾಡುತ್ತಾನೆಂದು ಪ್ರತೀತಿ ಇತ್ತು ಅವನ ಬಗ್ಗೆ. ಆದರೆ ನಾನು ಯಾವತ್ತೂ ಕೇಳಿರಲಿಲ್ಲ. ಅವನ, ಮಾವನ ನಡುವಿನ ಮಾತಿನಲ್ಲಿ ಎಲ್ಲಾದರೂ ಇಂಗ್ಲಿಷ್ ಮಾತಾಡಬಹುದೇನೋ ಎಂದು ನಾನು ಗಮನಿಸುತ್ತಾ ಕುಳಿತೆ. ಅವನ ಬಾಯಿಂದ ಹೊರಟ  ಹೆಂಡದ ದುರ್ನಾತ ಬಿಟ್ಟರೆ ಬೇರೇನೂ ಗಿಟ್ಟಲಿಲ್ಲ. "ಏನ್ರಿ ಬಾಬು, ನಿಮಗೆ ಮದ್ವೆ ಗಿದ್ವೆ ಆಗಿದ್ಯೋ?" ಎಂದು ಅಮಾಯಕವಾಗಿ ಕೇಳಿದೆ, ಮಾತಿಗಿಳಿಯುತ್ತಾ. ಅದೇನಾಯಿತೋ, ಬಾಬು ಎದ್ದು ಹೊರಟೇ ಬಿಟ್ಟ. "ಏನಾಯಿತು?" ಎಂದು ಮಾವನ್ನ ಕೇಳಿದೆ. ಆಗ ಅವರು ಬಾಬುವಿನ ಕಥೆ ಹೇಳಿದರು.

ಚಿಕ್ಕವನಿದ್ದಾಗಿನಿಂದಲೂ ಬಾಬು ನಮ್ಮ ಮನೆಯ ಸಣ್ಣ ಪುಟ್ಟ ಕೆಲಸಗಳಿಗೆ ಆಳಾಗಿ ದುಡಿಯುತ್ತಿದ್ದ. ಅಷ್ಟೇ ಅಲ್ಲ, ಮನೆಯಲ್ಲಿ ಯಾವುದೇ ಮದುವೆ, ಮುಂಜಿ, ತಿಥಿ-ವೈಕುಂಠಗಳು ನಡೆದರೂ, ಅಲ್ಲಿ ಕೆಲಸ ಮಾಡುತ್ತಿದ್ದ. ಸ್ವಲ್ಪ ವರ್ಷಗಳ ನಂತರ ಬಾಬು ಊರಿನಲ್ಲೇ ಅವರಿವರ ಬಳಿಯೂ ಕೆಲಸ ಮಾಡುತ್ತಾ ತನ್ನದು ಎನ್ನುವ ಒಂದು ಸಣ್ಣ ಮನೆಯನ್ನೂ ಬಾಡಿಗೆಗೆ ಮಾಡಿಕೊಂಡ. ಅವನ ಮದುವೆಯಲ್ಲಿ ನಮ್ಮ ಮಾವನೇ ಹೆಣ್ಣಿಗೆ ತಾಳಿ ಮಾಡಿಸಿ ಕೊಟ್ಟರು . ಮದುವೆಯ ನಂತರ ಬಾಬು ಅವನ ಹೆಂಡತಿ ಮಾದೇವಿಯೊಂದಿಗೆ ಬಂದು, ನಮ್ಮ ಅಜ್ಜಿಯ ಹಾಗು ಅತ್ತೆ - ಮಾವನ ಆಶೀರ್ವಾದ ಪಡೆದು ಹೋಗಿದ್ದ. ಮೂರ್ನಾಲ್ಕು ವರ್ಷಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು, ಮಗುವಾಗಿರಲಿಲ್ಲ ಎನ್ನುವುದೊಂದು ಬಿಟ್ಟರೆ.

ಅದೊಂದು ಸಲ, ಬಾಬುವಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು - ಯಾವುದೋ ದೊಡ್ಡ ಅಪಾರ್ಟ್ಮೆಂಟ್ ನಿರ್ಮಾಣದ ಕಾಮಗಾರಿ. ಊರಿನಲ್ಲಿ ಅವನು ಮಾಡುತ್ತಿದ್ದ ಕೆಲಸಗಳಿಗಿಂತ ಹೆಚ್ಚಿನ ಸಂಬಳ ಸಿಕ್ಕುತ್ತದೆ ಎಂದು ಅವನೂ ಹೊರಟ, ಮಾದೇವಿಯನ್ನು ಊರಿನಲ್ಲೇ ಬಿಟ್ಟು. ಮೊದಲ ತಿಂಗಳು ವಾರಕೊಮ್ಮೆ ಬಂದು ಹೋಗಿ ಮಾಡುತ್ತಿದ್ದ. ಆಮೇಲೆ, "ಸುಮ್ಮನೆ ಖರ್ಚು ಯಾಕೆ?" ಎಂದು ತಿಂಗಳ ಮೊದಲಿನಲ್ಲಿ ಬಂದು ಅವಳ ಕೈಗೆ ಸ್ವಲ್ಪ ದುಡ್ಡು ಕೊಟ್ಟು ಹೋಗುತ್ತಿದ್ದ. ಸುಮಾರು ಆರೇಳು ತಿಂಗಳ ನಂತರ ಬಾಬು ಊರಿಗೆ ವಾಪಸ್ಸಾದ, ಬೆಂಗಳೂರಿನ ಕೆಲಸ ಮುಗಿದ ಮೇಲೆ.

ಹೋಗುವ ಮೊದಲು ಆಗೊಮ್ಮೆ ಈಗೊಮ್ಮೆ ಕುಡಿಯುತ್ತಿದ್ದ ಬಾಬು, ಈಗ ದಿನವೂ ಕುಡಿಯಲು ಶುರು ಮಾಡಿದ. ಅಷ್ಟೇ ಆಗಿದ್ದರೆ ಮಾದೇವಿಯೂ ಸಹಿಸುತ್ತಿದ್ದಳೋ ಏನೋ. ಆದರೆ, ಕುಡಿದ ಅಮಲಿನಲ್ಲಿ ಅಕ್ಕಪಕ್ಕದ ಮನೆಯವರಿಗೆ ಕೇಳುವಂತೆ "ನನಗೆ ಒಂದು ಮಗು ಹೆತ್ತು ಕೊಡಕ್ಕೆ ಆಗಲ್ವೇನೇ?" ಎಂದು ಬಯ್ಯಬಾರದ ಪದಗಳಲ್ಲಿ ಬಯ್ಯಲು ಶುರು ಮಾಡಿದ. ರೋಸಿ ಹೋದ ಮಾದೇವಿ, ನಮ್ಮ ಮನೆಯ ಹಿತ್ತಲಿನಲ್ಲಿ ಕುಕ್ಕರುಗಾಲಲ್ಲಿ ಕುಳಿತು  ಅವಳ ಗೋಳಿನ ಕಥೆಯನ್ನು ನಮ್ಮ ಅಜ್ಜಿ, ಅತ್ತೆಗೆ ಹೇಳಿದಳಂತೆ. ಇವರುಗಳು ನಮ್ಮ ಮಾವನಿಗೆ ಹೇಳಿದರಂತೆ, ಬಾಬುವಿಗೆ ತಿಳಿಹೇಳಲು. ನಮ್ಮ ಮಾವನೂ  ಅವನನ್ನು ಕರೆದು ಚೆನ್ನಾಗಿ ಬಯ್ದರು. ಅವರ ಭಯಕ್ಕೋ ಏನೋ, ಸ್ವಲ್ಪ ದಿನಗಳ ಕಾಲ ಬಾಬು ಕುಡಿಯುವುದನ್ನು ಬಿಟ್ಟನಂತೆ; ಹೆಂಡತಿಯನ್ನು ಹೀಯಾಳಿಸುವುದನ್ನು ಕೂಡ. ಆದರೆ, ಅವನು ಕುಡಿಯುವುದನ್ನು ಬಿಟ್ಟರೂ, ಹೆಂಡ ಅವನನ್ನು ಬಿಡಲಿಲ್ಲ. ಅವನ ಚಟ ಮತ್ತೆ ಶುರುವಾದಾಗ, ಮಾದೇವಿಗೆ ದಿಕ್ಕೇ ತೋಚದಾಯಿತು. ಆಗ ಅವಳಿಗೆ ಸಾಂತ್ವನ ಹೇಳಿದವನೇ ಎದುರು ಮನೆಯ ಶೇಖರ.

ಶೇಖರನಿಗೆ ಈಗೆರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಊರ ಹಬ್ಬಕ್ಕೆಂದು ಹೋದ ಹೆಂಡತಿ ಅದ್ಯಾಕೋ ವಾಪಸ್ಸು ಬರಲೇ ಇಲ್ಲ. ಇವನು ವರದಕ್ಷಿಣೆಗಾಗಿ ಗೋಳುಹೊಯ್ದುಕೊಳ್ಳುತ್ತಿದ್ದನೆಂದೂ, ಹೆಂಡತಿಗೆ ಹೊಡೆಯುತ್ತಿದ್ದನೆಂದೂ ಅಲ್ಲಲ್ಲಿ  ಗುಸುಗುಸು  ಹಬ್ಬಿತ್ತು. ಇಷ್ಟಾಗಿಯೂ, ಮಾದೇವಿಗೆ ಇವನೊಡನೆ ಸ್ನೇಹವಾಯಿತು. ಕ್ರಮೇಣ, ಸ್ನೇಹ ಸಂಬಂಧವಾಯಿತು. ಇವರ ಬಗ್ಗೆ ಅವರ ಬೀದಿಯ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರೂ, ಬಾಬುವಿಗೆ ಹೇಳುವ ಧೈರ್ಯ ಯಾರಿಗೂ ಮೂಡಲಿಲ್ಲ. ನಮ್ಮ ಮಾವನಿಗೆ ತಿಳಿದೇ ಇರಲಿಲ್ಲವಂತೆ. ತಿಳಿದಿದ್ದರೆ, ಮಾದೇವಿಯನ್ನು ಕರೆದು ತಿಳಿಹೇಳುತ್ತಿದ್ದರೋ ಏನೋ.

ಶೇಖರ ಮಾದೇವಿಯರ ಸಂಬಂಧ ಎಷ್ಟು ಗಾಢವಾಯಿತೆಂದರೆ, ಬಾಬು ಬೆಂಗಳೂರಿಗೆ ಅಥವಾ ಬೇರೆ ಊರಿಗೆ ಕೆಲಸಕ್ಕೆ ಹೋಗಿದ್ದಾಗ, ಶೇಖರ ಬಾಬುವಿನ ಮನೆಯಲ್ಲೇ ಇರುತ್ತಿದ್ದ. ಹೀಗಿರುವಾಗ, ಒಂದು ದಿನ, ಬೆಂಗಳೂರಿಗೆ ಹೋಗಿದ್ದ ಬಾಬು ಇದ್ದಕ್ಕಿದ್ದಂತೆ ವಾಪಸ್ಸು ಬಂದ, ಮಾದೇವಿಗೂ ತಿಳಿಸದೆಯೇ. ಅದು ಹೇಗೆ ಬೀದಿಯವರೆಲ್ಲರಿಗೂ ತಿಳಿಯಿತೋ ಏನೋ? ಈ ದೃಶ್ಯವನ್ನು ನೋಡಲು ಎಲ್ಲರೂ ಅವರವರ ಮನೆಯ ಬಾಗಿಲುಗಳ ಮುಂದೆ ಹಾಜರಾದರು. ಮನೆಗೆ ಹೋದ ಬಾಬು ಶೇಖರನನ್ನು ಕಂಡಾಗ ಒಂದು ಮಾತೂ ಆಡಲಿಲ್ಲ. ಶೇಖರ ತಲೆಬಗ್ಗಿಸಿ ಹೊರನಡೆದು ತನ್ನ ಮನೆ ಸೇರಿಕೊಂಡ. ಹೊಡೆದಾಟ ಬಡಿದಾಟಗಳನ್ನು ನಿರೀಕ್ಷಿಸಿದ್ದ  ಜನ ನಿರಾಸೆಯಿಂದ ಮನೆಯೊಳಕ್ಕೆ ಹೋದರು.

ಎರಡು ಮೂರು ದಿನಗಳ ನಂತರ, ವೆಂಕಟೇಶಬಾಬು ಮಾದೇವಿಯನ್ನು ಕರೆದುಕೊಂಡು ಹೋಗಿ ಶೇಖರನ ಮನೆಯಲ್ಲಿ ಬಿಟ್ಟು ಬಂದ. ಅಷ್ಟೇ ಅಲ್ಲ, ಕೈಗೆ ಸ್ವಲ್ಪ ಹಣವನ್ನೂ ಕೊಟ್ಟನಂತೆ. ಇದೆಲ್ಲಾ ಆಗಿ ನಾಲ್ಕು ವರ್ಷಗಳಾಗಿವೆ. ಅವರ ನಡುವೆ ಅದೇನು ನಿರ್ಣಯವಾಯಿತೋ ಗೊತ್ತಿಲ್ಲ. ಈಗಲೂ, ಬಾಬುವಿಗೆ ಹುಷಾರಿಲ್ಲದಿದ್ದಾಗ ಅಥವಾ ಬೇರೆ ಅನಿವಾರ್ಯ ಸಂದರ್ಭದಲ್ಲಿ, ಮಾದೇವಿಯೇ ಅಡುಗೆ ಊಟಗಳನ್ನು ನೀಡುತ್ತಾಳೆ. ಅಷ್ಟೇ ಅಲ್ಲ, ಪ್ರತಿ ದೀಪಾವಳಿಗೂ ಬಾಬು ಅವಳಿಗೆ ಹೊಸ ಸೀರೆಯೊಂದನ್ನು ಕೊಡಿಸುತ್ತಾನೆ. ಅಲ್ಲದೆ, ಅವಳ ಮೂರು ವರ್ಷದ ಮಗನಿಗೆಂದೇ ಪಟಾಕಿಗಳನ್ನೂ ತರುತ್ತಾನಂತೆ.

ಮಾವ ಇಷ್ಟು ಕಥೆ ಹೇಳಿ ಮುಗಿಸುವ ಹೊತ್ತಿಗೆ ನಮ್ಮ ಅತ್ತೆ ಬಂದು ಕರೆದರು ಎಂದು ಎದ್ದು ಒಳಗೆ ಹೋದೆವು. ಬಾಬು ಹಾಗೇಕೆ ಮಾಡಿದ ಎಂದು ಯೋಚಿಸುತ್ತಾ ಮಲಗಿದ ನನಗೆ ಮಾರನೆಯ ದಿನ ಅವನನ್ನು ಮಾತಾಡಿಸುವ ತವಕ ಉಂಟಾಯಿತು. ಯಾವುದೊ ಕಾರಣಕ್ಕೆ ಮನೆಗೆ ಬಂದ ಬಾಬುವನ್ನು ಅವನು ಹೊರಹೋಗುವಾಗ ಯಾರಿಗೂ ಕಾಣದಂತೆ ನಿಲ್ಲಿಸಿ ಕೇಳಿಯೇಬಿಟ್ಟೆ. ಅವನು ನಗುತ್ತ "ನೋಡಿ ಬುದ್ದಿ, ಮಾದೇವಿ ನನ್ನ ಜೊತೆ ಇದ್ದಿದ್ರೆ, ನಾವು ಮೂರೂ ಜನ ನೆಮ್ಮದಿಯಾಗಿ ಇರಾಕಾಗ್ತಿರ್ಲಿಲ್ಲ. ಅವಳನ್ನ ಮದ್ವೆಯಾಗಿದ್ದು ಅವಳನ್ನ ಸಂತೋಷವಾಗಿ ನೋಡ್ಕೋತೀನಿ ಅಂತಲ್ವಾ? ನನ್ನ ಕೈಯಲ್ಲಿ ಅದು ಆಗಲ್ಲ ಅಂತ ಅವಳ ಜೀವನ ಯಾಕೆ ಹಾಳು ಮಾಡಬೇಕು, ಹೇಳಿ? ಅದ್ಕೆ ಕರ್ಕೊಂಡು ಹೋಗಿ ಬಿಟ್ಟೆ. ಅವ್ಳಿಗೆ ಯಾವ ಉಪಕಾರಾನೂ ಮಾಡಿಲ್ಲ ನಾನು. ಅವಳ ಇಷ್ಟ ಹೇಗೋ ಅವಳು ಹಾಗೆ ಬದ್ಕೋದು ನ್ಯಾಯ. ಮಾತಾಡೋರು ಎಷ್ಟು ದಿನ ಅಂತ ಮಾತಾಡಾರು? ಕಡೇಲಿ, ನಮ್ಮ ಬದುಕು ನಾವೇ ಬಾಳ್ಬೇಕು, ಅಲ್ವಾ? ಬರ್ತೀನಿ ಬುದ್ದಿ" ಎನ್ನುತ್ತಾ ತನ್ನ ಕೆಲಸಕ್ಕೆ ಹೋದ.