Thursday, February 23, 2017

ಬಿಡುಗಡೆ

ಅವತ್ತು ಸಂಜೆ ಗಾಂಧಿ ಬಜಾರಿನಿಂದ ಮನೆಗೆ ಬರುತ್ತಿದ್ದಾಗ, ಪಕ್ಕದ ಮನೆಯ ನಾರಾಯಣರಾಯರು ಗೇಟಿನ ಬಳಿಯಲ್ಲಿ ಸಿಕ್ಕರು. ಸುಮಾರು ಎಂಭತ್ತು ವರ್ಷದ ರಾಯರನ್ನು ಕಂಡರೆ ನಮ್ಮ ಬಡಾವಣೆಯ ಎಲ್ಲರಿಗೂ ಪ್ರೀತಿ. ಒಂದು ತೆರನಾದ ಗೌರವ. ನಮ್ಮ ತಲೆಮಾರಿನವರು ಅವರನ್ನು ಸಹಜವಾಗಿಯೇ 'ತಾತ' ಎಂದು ಸಂಬೋಧಿಸುತ್ತೇವೆ. ಅವರಿಗೆ, ಅದೇಕೋ, ನಮ್ಮ ಮನೆಯವರು ಅಂದರೆ ವಿಶೇಷ ಆತ್ಮೀಯತೆ. ನಮಗೂ ಅಷ್ಟೇ. ಮಗ, ಮಗಳು ವಿದೇಶದಲ್ಲಿದ್ದದ್ದರಿಂದ  ಪ್ರತಿ ಹಬ್ಬಕ್ಕೂ ರಾಯರನ್ನು ನಮ್ಮ ಮನೆಗೆ ಊಟಕ್ಕೆ ಕರೆಯುತ್ತೇವೆ. ಅಷ್ಟೇ ಅಲ್ಲ. ಅಮ್ಮ ಮನೆಯಲ್ಲಿ ಏನೇ ಸ್ಪೆಷಲ್ ಅಡಿಗೆ ಮಾಡಿದರೂ ಅವರಿಗೆ ತಲುಪುತ್ತದೆ. ಕಿವಿ ಸ್ವಲ್ಪ ಊನವಾಗಿದೆ  ಎನ್ನುವುದು ಬಿಟ್ಟರೆ, ರಾಯರು ದೃಢವಾಗಿಯೇ ಇದ್ದಾರೆ.

ಗೇಟಿನ ಬಳಿ ಸಿಕ್ಕ ತಾತ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋದವರೇ ಅವರ ಮನೆಯ ಹಜಾರದಲ್ಲಿ ಹರಡಿಕೊಂಡಿದ್ದ ಮಾಸಲು ತಿರುಗಿದ್ದ ಕೆಲವು ಪತ್ರಿಕೆಗಳನ್ನೂ ಭಾವಚಿತ್ರಗಳನ್ನೂ ತೋರಿಸಿ ಅವುಗಳ ಹಿಂದಿನ ಕಥೆ ಹೇಳಲು ಶುರು ಮಾಡಿದರು. ಅವುಗಳ ನಡುವೆ ಒಂದು ಹತ್ತು - ಹನ್ನೊಂದು ವರ್ಷದ ಹುಡುಗನ ಭಾವಚಿತ್ರವೂ ಇತ್ತು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶಾಲೆಯ ಯಾವುದೋ ಕಾರ್ಯಕ್ರಮಕ್ಕಾಗಿ ತಾತ ಪೋಷಾಕು ಧರಿಸಿದ್ದಾಗ ತೆಗೆದಿದ್ದಂತೆ. ಇವುಗಳನ್ನು ನೆನೆಸಿಕೊಳ್ಳುತ್ತಾ ಸ್ವಲ್ಪ ಭಾವುಕರಾದರು. ಆದರೆ ನನಗೇಕೆ ಇದನ್ನೆಲ್ಲಾ ಹೇಳುತ್ತಿದ್ದಾರೆ ಎಂದು ಅರ್ಥವಾಗದೆ, ಅವರನ್ನು ಕೇಳಿದೆ. "ನನಗಾದರೂ ಇಲ್ಲಿ ಯಾರಿದ್ದಾರೆ? ಮೊಮ್ಮಕ್ಕಳು ಇಲ್ಲೇ ಇದ್ದಿದ್ರೆ, ಅವರಿಗೆ ಹೇಳ್ತಿದ್ದೆ. ಅವರ ಸ್ಥಾನದಲ್ಲಿ ನೀನಿದ್ದೀಯ" ಎಂದು ತಾತ ಹೇಳಿದಾಗ ನನಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.

ಸ್ವಲ್ಪ ಹೊತ್ತಿನ ನಂತರ "ನೀವು ಯಾಕೆ ಹೋಗಿ ನಿಮ್ಮ ಮಗಳ ಮನೇಲಿ ಸ್ವಲ್ಪ ದಿನ, ಮಗನ ಮನೇಲಿ ಸ್ವಲ್ಪ ದಿನ ಇರಬಾರದು?" ಎಂದು ಕೇಳಿದೆ. ಅದಕ್ಕೆ ತಾತ "ಆ ಪ್ರಯತ್ನಾನೂ ಮಾಡಿದ್ದೀನಿ. ಇವಳು ತೀರಿಹೋದಾಗ ನನ್ನ ಮಕ್ಕಳು, ಮೊಮ್ಮಕ್ಕಳು ಎಲ್ಲ ಬಂದಿದ್ರು. ಅದೊಂದೇ ಸಲ ಅನ್ಸತ್ತೆ ಹಾಗೆ ಎಲ್ಲ ಒಟ್ಟಿಗೆ ಸೇರಿದ್ದು. ಇವಳು ಹೋಗಿದ್ದಕ್ಕೆ ಅಳಬೇಕಾ? ಖುಷಿ ಪಡಬೇಕಾ? ಅಂತ ಒಂದು ಕ್ಷಣ ಅರ್ಥವೇ ಆಗ್ಲಿಲ್ಲ! ಹೋಗ್ಲಿ ಬಿಡು. ನಾನೊಬ್ಬನೇ ಇಲ್ಲಿ ಇದ್ದು ಏನು ಮಾಡಬೇಕು ಅಂತ ಮಗ ಎರಡು ಮೂರು ಸಲ ಹೋಗಿ ಬಂದು ಮಾಡಿ ನನ್ನನ್ನ ಅವ್ನ ಜೊತೆ ಕರೆದುಕೊಂಡು ಹೋಗೋದಕ್ಕೆ ವ್ಯವಸ್ಥೆ ಮಾಡಿದ. ಹೋದ ಸ್ವಲ್ಪ ದಿನ ಅವ್ನು, ಸೊಸೆ ಇಬ್ರೂ ರಜ ಹಾಕಿ ನನ್ನ ಜೊತೇನೆ ಇದ್ರು. ದೇಶಾನೂ ಸುತ್ತಿಸಿದ್ರು. ಆದ್ರೆ ಅವ್ರು ಕೂಡ ಎಷ್ಟು ದಿನ ಅಂತ ಈ ಮುದುಕನ ಮುಂದೆ ಕೂರಕ್ಕಾಗತ್ತೆ ಹೇಳು? ಜೀವನ ನಡಿಬೇಡ್ವ? ಅವ್ರು ಕೆಲಸಕ್ಕೆ ಹೋದ್ಮೇಲೆ, ನಾನು ಅಲ್ಲಿ ಟಿವಿ ನೋಡ್ತಾ ಇದ್ದೆ. ಪುಸ್ತಕ ಓದ್ತಾ ಇದ್ದೆ. ಹೇಗೋ ಒಂದೆರಡು ತಿಂಗಳು ತಳ್ಳಿದ್ದಾಯ್ತು. ಆಗ ಅನ್ನಿಸ್ತು. ಇಷ್ಟನ್ನ ಮಾಡಕ್ಕೆ ನಾನು ನನ್ನ ಮನೆ ಬಿಟ್ಟು, ನನ್ನ ಊರು ಬಿಟ್ಟು ಇಲ್ಲಿಗೆ ಯಾಕೆ ಬರಬೇಕಿತ್ತು ಅಂತ. ಮಗನಿಗೆ ಹೇಳಿದೆ. ಪಾಪ, ಕರೆದುಕೊಂಡು ಬಂದು ಬಿಟ್ಟು, ಹೋದ. ಇಲ್ಲಿಗೆ ಬಂದ ತಕ್ಷಣ, ಅದೇನೋ, ಒಂದು ರೀತಿಯ ಬಿಡುಗಡೆ ಸಿಕ್ಕಹಾಗಾಯ್ತು. ಅಲ್ಲಿ ಚೆನ್ನಾಗಿ ನೋಡ್ಕೊತಿರ್ಲಿಲ್ಲ ಅಂತ ಅಲ್ಲ. ನನ್ನ ಸೊಸೆ, ಮಗಳ ಥರಾನೇ ನೋಡ್ಕೋತಾಳೆ. ಮೊಮ್ಮಕ್ಕಳು ಭಾಷೆ ಅಷ್ಟಾಗಿ ಬರದಿದ್ರೂ ದಿನ ಬೆಳಗ್ಗೆ, ರಾತ್ರಿ 'ಗುಡ್ ಮಾರ್ನಿಂಗ್', 'ಗುಡ್ ನೈಟ್' ಅಂತ ತಪ್ಪದೇ ಹೇಳ್ತಾ ಇದ್ರು. ಈ ಮುದುಕಂಗೇನೇ ಅದನ್ನ ಹೇಳಿಸಿಕೊಳ್ಳೋ ಅದೃಷ್ಟ ಇಲ್ಲ" ಎನ್ನುತ್ತಾ ವಿಷಾದದ ನಗೆ ನಕ್ಕರು ರಾಯರು.

ಅದೆಷ್ಟು ಹೊತ್ತು ಹಾಗೇ ಕುಳಿತಿದ್ದೆನೋ? ಕೊನೆಗೆ ತಾತನೇ ಮೌನ ಮುರಿದರು. "ಪಾಪ, ನನ್ನ ಮಕ್ಕಳದ್ದು ಏನೂ ತಪ್ಪಿಲ್ಲ, ಬಿಡು. ಅವರನ್ನ ಚೆನ್ನಾಗಿ ಓದ್ಸಿದ್ದು ಅವ್ರ ಜೀವನ ಅವ್ರು ರೂಪಿಸಿಕೊಬೇಕು ಅಂತ ತಾನೇ? ಹಕ್ಕಿಗೆ ಹಾರೋದು ಹೇಳಿಕೊಟ್ಟು 'ಹಾರಬೇಡ. ಗೂಡಲ್ಲೆ ಇರು' ಅಂದ್ರೆ ಅದು ಕೇಳತ್ತಾ? ನಂಗೇನು ಕಡಿಮೆ ಮಾಡಿಲ್ಲ ನನ್ನ ಮಕ್ಕಳು. ಪ್ರತಿ ತಿಂಗಳು ಹಣ ಕಳಿಸ್ತಾರೆ. ಹೋದ ಸಲ ನನ್ನ ಮಗಳು ಬಂದಿದ್ದಾಗ 'ಇನ್ಮೇಲೆ ನೀನೇ ಅಡಿಗೆ ಮಾಡ್ಕೊಬಾರದು' ಅಂತ ಖಡಾಖಂಡಿತವಾಗಿ ಹೇಳಿ, ಒಬ್ಬ ಅಡಿಗೆಯವಳ್ನ, ಕೆಲಸದವಳ್ನ ಗೊತ್ತು ಮಾಡಿಕೊಟ್ಟು ಹೋದ್ಲು. ಅವ್ಳಿಗೆ ಹಣನೂ ನಾನು ಕೊಡೋದು ಬೇಡ ಅಂದ್ಲು. ತಿಂಗಳಾಗ್ತಾ ಇದ್ದ ಹಾಗೆ ಅವ್ರ ಅಕೌಂಟ್ಗೆ ಕಳಿಸೋ ರೀತಿ ವ್ಯವಸ್ಥೆನೂ ಮಾಡಿದ್ದಾಳೆ. ಎರಡು ದಿನಕ್ಕೆ ಒಂದು ಸಲ ಇಬ್ರಲ್ಲಿ ಒಬ್ರು ಫೋನ್ ಮಾಡ್ತಾರೆ. ವಾರಕ್ಕೋ ಹತ್ತು ದಿನಕ್ಕೋ ಒಂದು ಸಲ ಸ್ಕೈಪ್ ಮಾಡ್ತೀವಿ. ಥೇಟು ಇಲ್ಲೇ ಇದ್ದ ಹಾಗೆ ಆಗತ್ತೆ. ಇಲ್ಲಿ ಇಲ್ಲ ಅಷ್ಟೆ" ಎನ್ನುತ್ತಾ ತಾತ ನಿಟ್ಟುಸಿರು ಬಿಟ್ಟರು.


"ಅಲ್ಲಿಗೆ ಹೋದಮೇಲೆ ಒಂದು ವಿಚಾರ ಗೊತ್ತಾಯ್ತು. ಅಲ್ಲಿ ಎಲ್ಲರೂ ಇದ್ದು ಒಂಟಿಯಾಗಿ ಇರೋದಕ್ಕಿಂತ, ಇಲ್ಲಿ ಒಬ್ಬನೇ ಇದ್ರೂ ನಿಮ್ಮಗಳ ಜೊತೆ, ನಾನು ಬೆಳೆದ ಊರಿನಲ್ಲಿ ಇರೋದೇ ಹೆಚ್ಚು ಸೂಕ್ತ" ಎಂದು ಅವರು ಹೇಳಿದಾಗ ಅವರು ಬಹಳ ಬಳಲಿದ್ದರು ಎಂದು ತಿಳಿಯುತ್ತಿತ್ತು. ಆದರೆ, ಅವರಿಗೆ ನಾನು ಏನೆಂದು ಸಮಾಧಾನ ಹೇಳಲಿ ಎಂದು ತಿಳಿಯದೆ ಒದ್ದಾಡುತ್ತಿದ್ದಾಗ ಮನೆಯಿಂದ ಫೋನ್ ಬಂತು. ತಾತನನ್ನು ಅವರ ಭಾವನೆಗಳೊಂದಿಗೆ ಏಕಾಂತದಲ್ಲಿ ಬಿಟ್ಟು ಹೊರಬಂದಾಗ, ಕಣ್ಣುಗಳು ಮಂಜಾಗಿದ್ದವು.

No comments:

Post a Comment